ಸಂಚಾರಿ ವಿಜಯ್ ಅಪಘಾತದ ವಿಷಯ ತಿಳಿದು ಕೂಡಲೇ ನೆರವಿಗೆ ನಿಂತ ಕಿಚ್ಚ

 

ಬೆಂಗಳೂರು: ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕಲಾವಿದ ಸಂಚಾರಿ ವಿಜಯ್​ ಅವರು ರಸ್ತೆ ಅಪಘಾತಕ್ಕೆ ಒಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರಿಗೆ ಕಿಚ್ಚ ಸುದೀಪ್ ಅವರು ಸಹಾಯಸ್ತ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಜೂನ್ 12 ಶನಿವಾರ ರಾತ್ರಿ ಬನ್ನೇರುಘಟ್ಟ ರಸ್ತೆಯಲ್ಲಿ ಅವರಿಗೆ ಅಪಘಾತವಾಗಿತ್ತು. ಕೂಡಲೇ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ವಿಜಯ್​ ಅವರ ಪರಿಸ್ಥಿತಿ ತುಂಬ ಚಿಂತಾಜನಕವಾಗಿತ್ತು. ಸುದೀಪ್​ ಕೂಡಲೇ ಅಪೋಲೋ ಆಸ್ಪತ್ರೆ ವೈದ್ಯರಿಗೆ ಪೋನ್ ಮಾಡಿ ಶಸ್ತ್ರ ಚಿಕಿತ್ಸೆ ಮಾಡುವಂತೆ ಮನವಿ ಮಾಡಿದ ಹಿನ್ನೆಲೆ ವಿಜಯ್ ಅವರಿಗೆ ತ್ವರಿತಗತಿಯಲ್ಲಿ ಚಿಕಿತ್ಸೆ ಸಿಗಲು ಸಾಧ್ಯವಾಯ್ತು ಎಂದು ಹೇಳಲಾಗುತ್ತಿದೆ.

ಭಾನುವಾರ ರಾತ್ರಿ ವಿಜಯ್​ ಆರೋಗ್ಯದ ಬಗ್ಗೆ ಅಪೊಲೋ ಆಸ್ಪತ್ರೆಯಿಂದ ಅಧಿಕೃತ ಹೆಲ್ತ್​ ಬುಲೆಟಿನ್​ ಬಿಡುಗಡೆಯಾಗಿದೆ. ಅದರ ಪ್ರಕಾರ ವಿಜಯ್ ಅವರ ಸ್ಥಿತಿ ಇನ್ನೂ ಗಂಭೀರವಾಗೇ ಇದೆ. ಆಸ್ಪತ್ರೆಗೆ ಕರೆತಂದಾಗ ಮೆದುಳಿನಲ್ಲಿ ಉಂಟಾದ ರಕ್ತಸ್ರಾವದಿಂದ ವಿಜಯ್​ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಕೂಡಲೇ ಶಸ್ತ್ರಚಿಕಿತ್ಸೆ ನಡೆಸಿ ರಕ್ತಸ್ರಾವ ತೆಗೆಯಲಾಗಿದೆ. ಅವರು​ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಜೀವ ರಕ್ಷಕ ವಿಧಾನದ ಮೂಲಕ, ನ್ಯೂರೋ ಐಸಿಯುನಲ್ಲಿ ಇದ್ದಾರೆ. ನಾವು ಅತ್ಯುತ್ತಮ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ತಿಳಿಸಲಾಗಿದೆ.